ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ “ಯಕ್ಷಗಾನ ಪ್ರಾತ್ಯಕ್ಷಿತೆ”
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಫೆಬ್ರವರಿ 25 , 2016
|
ಧಿರ ವಯ್ಯಾರೋ ಬಹುಪರಾಕ್, ಶರಧಿ ಗಂಭಿರೋ ಬಹುಪರಾಕ್, ಕಸ್ತೂರಿ ಕೋಲಾಹಲೋ ಸ್ವಾಮಿ ಪರಾಕ್, ಸ್ವಾಮಿ ಪರಾಕ್, ಭೂಮಿ ಪರಾಕ್, ದೇವ ಪರಾಕ್, ಸ್ವಾಮಿ ಪರಾಕ್ ಎಂದು ಕೋಡಂಗಿ ನೃತ್ಯಗಾರರು ಚೌಕಿಯಲ್ಲಿ ಗಣಪತಿ ಪೂಜೆ ಮುಗಿಸಿ ದಿವಟಿಕೆ ಹಿಡಿದು ಭಾಗವತರು, ಚಂಡೆ, ಮದ್ದಲೆಯೊಂದಿಗೆ ಬಹುಪರಾಕ್ ಹಾಕುತ್ತಾ ರಂಗಕ್ಕೆ ಬಂದು ಗಜವದನನನ್ನು ಧ್ಯಾನಿಸಿ ಕಾರ್ಯಕ್ರಮಕ್ಕೆ ವಿಘ್ನಬಾರದಂತೆ ರಂಗದಲ್ಲಿ ಕೊಂಡಾಡುತ್ತಾರೆ.
ಈ ಸಂದರ್ಭದಲ್ಲಿ ತೆಕ್ಕಟ್ಟೆಯ ಕುವೆಂಪು ಶತಮಾನೋತ್ಸವ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ಚಂಡೆ ಬಾರಿಸುವ ಮೂಲಕ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ 5 ದಿನಗಳ ಕಾಲ ಜಿಲ್ಲೆಯ ಬೇರೆ ಬೇರೆ ಶಾಲೆಯಲ್ಲಿ ನಡೆಸುವ ಯಕ್ಷಗಾನ ಪ್ರಾತ್ಯಕ್ಷಿತೆಯನ್ನೂ 23-02-2016 ರಂದು ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಹಿ. ಪ್ರಾ. ಶಾಲೆಯ ರಂಗ ಮಂಟಪದಲ್ಲಿ ಉದ್ಘಾಟಿಸಿ -
``ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನ ಈ ಭಾಗದ ಜನರ ಭಾಷಾ ಶುದ್ಧತೆಗೆ ಹಾಗೂ ಬುದ್ಧಿವಂತರು ಎಂದು ಕರೆಸಿಕೊಳ್ಳುವುದಕ್ಕೆ ಮೂಲ ಕಾರಣ ಯಕ್ಷಗಾನ. ಶಾಲಾ ಮಕ್ಕಳಿಗೆ ನಾಲ್ಕು ಗೋಡೆಯ ಮಧ್ಯೆ ಕಲಿಸಿ ಕೊಡುವ ಬೋಧನೆಗಿಂತ ಈ ರೀತಿಯ ಪ್ರಾಯೋಗಿಕ ಕಲಿಕೆ ಹೆಚ್ಚು ಪರಿಣಾಮಕಾರಿ ಮತ್ತು ಪ್ರಯೋಜನಕಾರಿ. ಯಕ್ಷಗಾನ ಕಲಾವಿದರಿಗಲ್ಲದೇ ಸಹೃದಯೀ ಪ್ರೇಕ್ಷಕರಿಗೂ ಕಲೆಯ ಮೂಲ ಸತ್ವಗಳ ಪರಿಚಯವಿರಬೇಕಾದದು ಅತೀ ಅಗತ್ಯ. ಆ ನೆಲೆಯಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿಯೇ ಬೆಂಗಳೂರಿನ ಯಕ್ಷದೇಗುಲ ತಂಡದವರು ಸಂಯೋಜಿಸಿದ ಈ ಯಕ್ಷಗಾನ ಪ್ರಾತ್ಯಕ್ಷಿತೆ. ಪ್ರಸ್ತುತ ನಡೆಯಲೇ ಬೇಕಾದ ಪ್ರೋತ್ಸಾಹಕ ಕೆಲಸ`` ಎಂದು ಶುಭ ಹಾರೈಸಿದರು.
ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದೇವದಾಸ್ ಪೈಯವರು ನಾವು ಶತಮಾನದಿಂದಲೂ ಪ್ರೇಕ್ಷಕರಾಗಿ ಯಕ್ಷಗಾನವನ್ನು ಆಸ್ವಾದಿಸುತ್ತಲೇ ಬಂದಿದ್ದೇವೆ. ಆದರೆ ರಂಗದ ಹಿಂದಿನ ಕಲಾವಿದರ ಪರಿಶ್ರಮವು ಹೊರ ಜಗತ್ತಿಗೆ ಪರಿಚಯಿಸುವ ಕೆಲಸವಾಗಲಿ, ಯಕ್ಷಗಾನದ ಮೂಲ ಸತ್ತ್ವಗಳ ದಾಖಲೀಕರಣ ಪ್ರಕ್ರಿಯೆಯಾಗಲಿ ಅಷ್ಟೊಂದು ಪರಿಣಾಮಕಾರಿಯಾಗಿ ನಡೆಯಲಿಲ್ಲ. ಆ ಕಾರ್ಯವನ್ನು ಬೆಂಗಳೂರಿನ ಯಕ್ಷದೇಗುಲ ತಂಡ ನಿರ್ವಹಿಸುತ್ತಿರುವುದು ಪ್ರಶಂಸನೀಯ ಎಂದರು.
ಉದ್ಯಮಿ ಮಲ್ಯಾಡಿ ಸೀತಾರಾಮ ಶೆಟ್ಟಿಯವರು 23 ರಿಂದ 27 ರ ತನಕ ನಡೆಯುವ ಯಕ್ಷಗಾನ ಪ್ರಾತ್ಯಕ್ಷಿತೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಾಗೆ ವೇದಿಕೆಯಲ್ಲಿ ಯಕ್ಷದೇಗುಲದ ವ್ಯವಸ್ಥಾಪಕರಾದ ಕೋಟ ಸುದರ್ಶನ ಉರಾಳರು ಉಪಸ್ಥಿತರಿದ್ದರು.
ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಸಹಕಾರದಿಂದ ನಡೆದ ಕಾರ್ಯಕ್ರಮವನ್ನು ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿದರು. ಭಾಗವತ ಲಂಬೋದರ ಹೆಗಡೆ ವಂದಿಸಿದರು. ನಂತರ ಉಪನ್ಯಾಸಕ, ಕಲಾವಿದ ಸುಜಯೀಂದ್ರ ಹಂದೆಯವರ ಪ್ರಾತ್ಯಕ್ಷಿತೆಯ ಸಮರ್ಥ ನಿರೂಪಣೆಯೊಂದಿಗೆ ಬಾಲಗೋಪಾಲ, ಕೋಡಂಗಿ, ಪದಾಭಿನಯ, ಯುದ್ಧ ಕುಣಿತ, ಮುದ್ರೆಗಳ ಪರಿಚಯ, ಅಟ್ಟೆ ಕ್ಯಾದಿಗೆ ಮುಂದಲೆ ಕಟ್ಟುವ ಕ್ರಮ, ಗಂಡು ಬಣ್ಣದ ಚಿಟ್ಟೆ ಇಡುವ ಕ್ರಮ, ವಸ್ತ್ರಾಲಂಕಾರ ಮಾಡುವುದು, ಪೌರಾಣಿಕ ಪ್ರಸಂಗಗಳ ಸ್ವಾರಸ್ಯಕರ ಸನ್ನಿವೇಷಗಳ ಪ್ರಸ್ತುತಿ ಹೀಗೆ ಕಲಾವಿದರಾಗಿ ಲಂಬೋದರ ಹೆಗಡೆ, ದೇವರಾಜ್, ಗಣಪತಿ ಭಟ್, ಮಾಧವ, ಕೃಷ್ಣಮೂರ್ತಿ ಉರಾಳ್, ತಮ್ಮಣ್ಣ ಗಾಂವ್ಕರ್, ಕಡ್ಲೆ ಗಣಪತಿ ಹೆಗಡೆ, ನವೀನ್ ಕೋಟ, ನರಸಿಂಹ ತುಂಗ, ಉದಯಬೋವಿ, ಅಭಿವನ ತುಂಗ, ಸುಜಯೀಂದ್ರ ಹಂದೆ, ಗಣೇಶ್ ಉಪ್ಪುಂದ, ವಿಶ್ವನಾಥರವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಯಕ್ಷಗಾನ ಪ್ರಾತ್ಯಕ್ಷಿತೆಗೆ ನಿರ್ದೇಶನ ಕೆ. ಮೋಹನ್, ಸಂಯೋಜನೆ ಕೋಟ ಸುದರ್ಶನ ಉರಾಳರು ನೀಡಿದರು.
*********************
ಪ್ರಾತ್ಯಕ್ಷಿತೆಯ ಕೆಲವು ಚಿತ್ರಗಳು.
*********************
ಕೃಪೆ : ಕೋಟ ಸುದರ್ಶನ ಉರಾಳ, 9448547237
|
|
|